Join Us on : WhatsApp | Mobile app

Sunday, November 8, 2020

ಜನನಿ -ಶಿಶು ಸುರಕ್ಷಾ ಯೋಜನೆ

 ೨೦೧೧ ರ ಸೆಪ್ಟಂಬರ್ ೮ ರಂದು ಕರ್ನಾಟಕದಲ್ಲಿ ಈ ಯೋಜನೆ ಜಾರಿಯಾಗಿದೆ. ಈ ಯೋಜನೆ ಅನ್ವಯ ಸಾರ್ವಜನಿಕ ಸಂಸ್ಥೆಯಲ್ಲಿ ಹೆರಿಗೆಗೆ ಸಂಬಂದಿಸಿದ ಎಲ್ಲಾ ವೆಚ್ಚಗಳನ್ನು ಸರಕಾರವೇ ಭರಿಸುತ್ತದೆ ಮಾತ್ರವಲ್ಲ ಯಾವುದೇ ವಿಧದ ಸೇವಾ ಶುಲ್ಕಗಳನ್ನು ವಿಧಿಸುವುದಿಲ್ಲ. ಗರ್ಭಿನಿಗೆ ಮನೆಯಿಂದ ಸರಕಾರೀ ಆಸ್ಪತ್ರೆಗೆ ಹಾಗೂ ಗಂಭೀರ ಸಮಸ್ಯೆ ಇದ್ದಲ್ಲಿ ದೊಡ್ಡ ಆಸ್ಪತ್ರೆಗೆ ಸಾಗಿಸಲು ಉಚಿತವಾದ ಸಾರಿಗೆ ವ್ಯವಸ್ಥೆ ದೊರೆಯುತ್ತಿದೆ.

ಹೆರಿಗೆ ಸಂಬಂಧಿ ಕಾಯಿಲೆ ಹಾಗೂ ಸಮಸ್ಯೆಗಳಿಂದಾಗಿ ಕರ್ನಾಟಕದಲ್ಲಿ ಪ್ರತೀ ವರ್ಷ ಸುಮಾರು ೧೨೦೦ ಮಂದಿ ಮಹಿಳೆಯರು ಸಾವನ್ನಪ್ಪುತ್ತಿದ್ದಾರೆ. ಜನಿಸಿದ ಒಂದು ವರ್ಷದೊಳಗೆ ೩೬ ಸಾವಿರ ನವಜಾತ ಶಿಶುಗಳು ಮರಣ ಹೊಂದುತ್ತಿವೆ. ಹುಟ್ಟಿದ ನಾಲ್ಕೇ ವಾರಗಳಲ್ಲಿ ೨೨ ಸಾವಿರ ನವಜಾತ ಶಿಶುಗಳು ಹಾಗೂ ಹುಟ್ಟಿದ ಮೊದಲನೇ ವಾರದಲ್ಲಿ ಸುಮಾರು ೧೪ ಸಾವಿರ ನವಜಾತ ಶಿಶುಗಳು ಸಾವನ್ನಪ್ಪುತ್ತಿವೆ.

ದಿಗ್ಬ್ರಮೆಗೊಳಿಸುವ ಈ ಅಂಕಿ-ಅಂಶಗಳಿಗೆ ಕಾರಣ ಹುಡುಕುತ್ತಾ ಹೋದರೆ ಸಿಗುವ ಉತ್ತರ. ಆರ್ಥಿಕ ಹೊರೆಯಲ್ಲದ ತುರ್ತು ವೈದ್ಯಕೀಯ ಸೇವೆಗಳು ಸಕಾಲದಲ್ಲಿ ಸಿಗದಿರುವುದು. ಇದಕ್ಕೆ ಪರಿಹಾರವೂ ಈ ಉತ್ತರದಲ್ಲೇ ಇದೆ. ಉತ್ತಮ ಗುಣಮಟ್ಟದ ಅತ್ಯಾವಶ್ಯಕ ಹಾಗೂ ತುರ್ತು ಸಾರ್ವಜನಿಕ ವೈದ್ಯಕೀಯ ಸೇವೆಗಳು ಆರ್ಥಿಕ ಹೊರೆಯಾಗದಂತೆ ಸಕಾಲದಲ್ಲಿ ಲಭಿಸುವಂತಾದರೆ ತಾಯಿ ಹಾಗೂ ಶಿಶುಗಳನ್ನು ರಕ್ಷಿಸಬಹುದು.

ಜನನಿ ಸುರಕ್ಷಾ ಯೋಜನೆ (ಜೆ ಎಸ್ ವೈ) ಜಾರಿಗೊಳಿಸಿದ ನಂತರ ದೇಶದಲ್ಲಿ ಸಾಂಸ್ಥಿಕ ಹೆರಿಗೆಗಳ ಸಂಖ್ಯೆಯಲ್ಲಿ ಬಹಳಷ್ಟು ಹೆಚ್ಚಳವಾಗಿದೆ. ಆದರೂ, ಹೆಚ್ಚಿನ ಮಹಿಳೆಯರು ಇನ್ನೂ ವೈದ್ಯಕೀಯ ಸೇವೆಗಳನ್ನು ಪಡೆಯುವಲ್ಲಿ ಹಿಂಜರಿಯುತ್ತಿದ್ದಾರೆ. ಸಾಂಸ್ಥಿಕ ಹೆರಿಗೆಗೆ ಮುಂದೆ ಬಂಡ ಮಹಿಳೆಯರೂ ಸಹ ೪೮ ತಾಸುಗಳ ತನಕ ಆಸ್ಪತ್ರೆಗಳಲ್ಲಿ ಇರಲು ಇಷ್ಟಪಡುವುದಿಲ್ಲ. ಇದರ ಪರಿಣಾಮವಾಗಿ, ತಾಯಿ ಮತ್ತು ನವಜಾತ ಶಿಶುಗಳಿಗೆ ಸೂಕ್ತ ಸೇವೆಗಳನ್ನು ಒದಗಿಸುವುದು ಕಷ್ಟಕರ. ಪ್ರಸೂತಿಯಾದ ಮೊದಲ ೪೮ ಗಂಟೆಗಳಲ್ಲಿ ಶುಶ್ರೂಷೆ ಲಭಿಸಿದಲ್ಲಿ ಯಾವುದೇ ಸಮಸ್ಯೆ-ತೊಂದರೆಗಳನ್ನು ಗುರುತಿಸಿ ಯೋಗ್ಯ ಪರಿಹಾರ ನೀಡುವುದು ಸುಲಭ.

ಗರ್ಭಿಣಿಯರಿಗೆ ಮತ್ತು ನವಜಾತ ಶಿಶುಗಳಿಗೆ ಸಾಂಸ್ಥಿಕ ಆರೋಗ್ಯ ಸವಲತ್ತುಗಳನ್ನು ಬಳಸುವಲ್ಲಿ ದುಬಾರಿ ಹೆಚ್ಚುವರಿ ವೆಚ್ಚಗಳು ದೊಡ್ಡ ಹೊರೆಯಾಗಿ ಪರಿಣಮಿಸುವುದು ನಿಸ್ಸಂದೇಹ. ಬಡ ಕುಟುಂಬಗಳು ಇಂತಹ ವೆಚ್ಚಗಳನ್ನು ಭರಿಸುವುದು ಕಷ್ಟಕರ ಎನ್ನುವುದು ಸ್ಪಷ್ಟ.

ಇಂತಹ ಪರಿಸ್ಥಿತಿಯಲ್ಲಿ, ಜನರಿಗೆ ಸುಲಭದಲ್ಲೇ ದೊರಕುವಂತಹ ಆರೋಗ್ಯ ಸೇವೆಗಳನ್ನು ಒದಗಿಸುವ ಎನ್ ಆರ್ ಎಚ್ ಎಮ್ ಗುರಿ ಮತ್ತು ಉದ್ದೇಶಗಳಿಗೆ ಸೋಲು ಉಂಟಾಗುತ್ತದೆ. ಎನ್ ಆರ್ ಎಚ್ ಎಮ್ ಅನ್ವಯ ಪ್ರತೀ ಗರ್ಭಿಣಿಗೆ ಅಗತ್ಯವಿರುವ ಪ್ರಸೂತಿ ಪೂರ್ವ, ಪ್ರಸೂತಿ ವೇಳೆ ಮತ್ತು ಪ್ರಸೂತಿ ನಂತರದ ಆರೋಗ್ಯ ಸೇವೆಗಳು ಮತ್ತು ರೋಗದ ವಿರುದ್ದ ರಕ್ಷಣೆ ಉಚಿತವಾಗಿ ಹಾಗೂ ಸಕಾಲದಲ್ಲಿ ಸಿಗುವಂತಾಗಬೇಕು.

ಈ ನಿಟ್ಟಿನಲ್ಲಿ ಇಟ್ಟಿರುವ ಹೊಸ ಹೆಜ್ಜೆಯೇ "ಜನನಿ - ಶಿಶು ಸುರಕ್ಷಾ ಕಾರ್ಯಕ್ರಮ" (ಜೆಎಸಎಸಕೆ ). ೨೦೧೧ ರ ಸೆಪ್ಟೆಂಬರ್ ೮ ರಂದು ಕರ್ನಾಟಕದಲ್ಲಿ ಈ ಯೋಜನೆ ಜಾರಿಯಾಗಿದೆ. ಈ ಯೋಜನೆ ಅನ್ವಯ ಸಾರ್ವಜನಿಕ ಸಂಸ್ಥೆಯಲ್ಲಿ ಹೆರಿಗೆಗೆ ಸಂಬಂಧಿಸಿದ ಎಲ್ಲಾ ವೆಚ್ಚಗಳನ್ನು ಸರಕಾರವೇ ಭರಿಸುತ್ತದೆ ಮಾತ್ರವಲ್ಲ ಯಾವುದೇ ವಿಧದ ಸೇವಾಶುಲ್ಕಗಳನ್ನು ವಿಧಿಸುವುದಿಲ್ಲ. ಗರ್ಭಿಣಿಗೆ ಮನೆಯಿಂದ ಸರಕಾರಿ ಆಸ್ಪತ್ರೆಗೆ, ಹಾಗೂ ಗಂಭೀರ ಸಮಸ್ಯೆಯಿದ್ದಲ್ಲಿ ದೊಡ್ಡ ಆಸ್ಪತ್ರೆಗೆ ಸಾಗಿಸಲು ಉಚಿತವಾದ ಸಾರಿಗೆ ವ್ಯವಸ್ಥೆ ದೊರೆಯುತ್ತಿದೆ.

ಉಚಿತವಾದ ಔಷಧ ಮತ್ತು ಅವಶ್ಯಕ ಉಪಯೋಗದ ವಸ್ತುಗಳು, ರೋಗ ಪತ್ತೆ ಹಚ್ಚಲು ಪರೀಕ್ಷಾ ವೆಚ್ಹ. ಅಗತ್ಯವಿದ್ದಾಗ ರಕ್ತ ಪೂರೈಕೆ ಮತ್ತು ಗರ್ಭಿಣಿ ಆಸ್ಪತ್ರೆಯಲ್ಲಿ ಇರಬೇಕಾಗುವಷ್ಟು ಕಾಲ- ಸಾಧಾರಣವಾಗಿ ಸಾಮಾನ್ಯ ಹೆರಿಗೆಗೆ ಎರಡು ದಿನ ಮತ್ತು  ಸಿಜೇರಿಯನ್ ಶಸ್ತ್ರ ಚಿಕಿತ್ಸೆಯ ವೇಳೆ ಏಳು ದಿನ-ಉಚಿತ ಆಹಾರ ನೀಡುವುದೂ ಈ ಯೋಜನೆಯಡಿ ಸೇರಿದೆ.

ಅನಾರೋಗ್ಯದಿಂದ ನರಳುವ ನವಜಾತ ಶಿಶುಗಳಿಗೆ ಸಾರ್ವಜನಿಕ ಆರೋಗ್ಯ ಸಂಸ್ಥೆಗಳಲ್ಲಿ ಜನನವಾದಂದಿನಿಂದ ೩೦ ದಿನಗಳವರೆಗೆ ಇಂತಹ ಉಚಿತ ಸೇವೆಗಳನ್ನು ಈ ಯೋಜನೆಯಲ್ಲಿ ನೀಡಲಾಗುತ್ತದೆ. ಉಚಿತ ಚಿಕಿತ್ಸೆಯೊಂದಿಗೆ, ಮನೆಯಿಂದ ಆಸ್ಪತ್ರೆಗೆ ಮತ್ತು ಅಗತ್ಯವಿದ್ದಲ್ಲಿ ಮೇಲ್ದರ್ಜೆಯ ಆಸ್ಪತ್ರೆಗೆ ಕೊಂಡೊಯ್ಯಬೇಕಾದಲ್ಲಿ ಉಚಿತ ಸಾರಿಗೆ ವ್ಯವಸ್ಥೆಯನ್ನು ಪಡೆಯಬಹುದಾಗಿದೆ.

ಜೆ ಎಸ್ಎಸ್ ಕೆ ಯಲ್ಲಿ ಗರ್ಭಿಣಿಯರು ಹಾಗೂ ಅನಾರೋಗ್ಯದಿಂದ ನರಳುವ ನವಜಾತ ಶಿಶುಗಳಿಗೆ ಸಿಗುವ ಸವಲತ್ತುಗಳು.

ಗರ್ಭಿಣಿಯರಿಗೆ

  • ಉಚಿತ ಹೆರಿಗೆ ಸೇವೆಗಳು
  • ಉಚಿತ ಸಿಜೇರಿಯನ್ ಶಸ್ತ್ರ ಚಿಕಿತ್ಸೆ
  • ಉಚಿತ ಪ್ರಯೋಗ ಶಾಲೆ ಸೇವೆಗಳು
  • ಉಚಿತ ಔಷಧಿಗಳು ಮತ್ತು ಬಳಕೆ ಸಾಮಗ್ರಿಗಳು
  • ಗರ್ಭಿಣಿಯರು ಹೆರಿಗೆಯ ಸಮಯದಲ್ಲಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾಗ ಉಚಿತ ಊಟ -ತಿಂಡಿ  (ಸಾಮಾನ್ಯ ಹೆರಿಗೆಗೆ ೨ ದಿನ ಮತ್ತು ಸಿಜೇರಿಯನ್ ಹೇರಿಗೆಯಾದರೆ ೭ ದಿನ )
  • ಅವಶ್ಯಕತೆಯಿರುವ ಗರ್ಭಿಣಿಯರಿಗೆ ಉಚಿತ ರಕ್ತದ ವ್ಯವಸ್ಥೆ.
  • ಮನೆಯಿಂದ ಆಸ್ಪತ್ರೆಗೆ, ಆಸ್ಪತ್ರೆಯಿಂದ ಮೇಲ್ದರ್ಜೆ ಆಸ್ಪತ್ರೆಗಳಿಗೆ ಉಚಿತ ಸಾರಿಗೆ ವ್ಯವಸ್ಥೆ.
  • ಎಲ್ಲಾ ರೀತಿಯ ಸೇವಾ ಶುಲ್ಕ ಪಾವತಿಯಿಂದ ವಿನಾಯಿತಿ.

ಅನಾರೋಗ್ಯದಿಂದ ನರಳುವ ನವಜಾತ ಶಿಶುಗಳಿಗೆ ಸಿಗುವ ಸೇವೆಗಳು

  • ಯಾವುದೇ ಹಣಕಾಸು ಖರ್ಚು ಮಾಡಿಸದ ಉಚಿತ ಸೇವೆಗಳು.
  • ಉಚಿತ ಔಷಧಿಗಳು ಮಾತು ಬಳಕೆ ಸಾಮಗ್ರಿಗಳು.
  • ಉಚಿತ ಪ್ರಯೋಗಶಾಲೆ ಪರೀಕ್ಷೆಗಳು.
  • ಅವಶ್ಯಕತೆಯಿರುವ ಶಿಶುಗಳಿಗೆ ಉಚಿತ ರಕ್ತದ ವ್ಯವಸ್ಥೆ.
  • ಮನೆಯಿಂದ ಆಸ್ಪತ್ರೆಗೆ, ಆಸ್ಪತ್ರೆಯಿಂದ ಆಸ್ಪತ್ರೆಗಳಿಗೆ ಸಾರಿಗೆ ವ್ಯವಸ್ಥೆ.
  • ಎಲ್ಲ ರೀತಿಯ ಸೇವಾ ಶುಲ್ಕದಿಂದ ವಿನಾಯಿತಿ

ಗರ್ಭಿಣಿಯರಿಗೆ ಔಷಧಿಗಳು ಮತ್ತು ಕಬ್ಬಿಣ ಮತ್ತು ಫೋಲಿಕ್ ಆಮ್ಲ ಮುಂತಾದ ಪೂರಕ ಅಂಶಗಳು ಸೇರಿದಂತೆ ಅಗತ್ಯ ಬಳಕೆಯ ವಸ್ತುಗಳನ್ನು ಪ್ರಸವ - ಪೂರ್ವ, ಪ್ರಸೂತಿ-ವೇಳೆ ಮತ್ತು ಪ್ರಸೂತಿ-ನಂತರ ೬ ವಾರಗಳ ತನಕ ಉಚಿತವಾಗಿ ನೀಡಲಾಗುತ್ತದೆ.

ಬಸಿರುತನ, ಹೆರಿಗೆ ಮತ್ತು ಪ್ರಸೂತಿ ಸಮಯದಲ್ಲಿ ಎದುರಿಸುವ ಸಂಭಾವ್ಯ ಸಮಸ್ಯೆಗಳನ್ನು ಸಕಾಲದಲ್ಲಿ ಪತ್ತೆ ಹಚ್ಚಲು ವೈದ್ಯಕೀಯ ಪರೀಕ್ಷೆಗಳು ಅಗತ್ಯವಿದೆ. ಇಂತಹ ಸೂಕ್ತ ಮತ್ತು ಅಗತ್ಯವಾಗಿರುವ ವೈದ್ಯಕೀಯ ಪರೀಕ್ಷೆಗಳನ್ನು ಗರ್ಭಿಣಿಯರಿಗೆ ಪ್ರಸವ-ಪೂರ್ವ, ಪ್ರಸೂತಿ-ವೇಳೆ ಮತ್ತು ಪ್ರಸೂತಿ-ನಂತರ ೬ ವಾರಗಳ ತನಕ ಉಚಿತವಾಗಿ ನೀಡಲಾಗುತ್ತದೆ. ನವಜಾತ ಶಿಶು ರೋಗಗ್ರಸ್ಥವಾಗಿದ್ದು ಸೋಂಕು, ನ್ಯುಮೋನಿಯಾ ಮುಂತಾದುಗಳ ತುರ್ತು ಚಿಕಿತ್ಸೆ ಬೇಕಾದ ವೇಳೆ ಇಂತಹುದೇ ಸೌಲಭ್ಯ ದೊರೆಯುತ್ತದೆ.

ಮೂಲ:ಕುಟುಂಬ ವಾರ್ತೆ

No comments:

Post a Comment